Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

ನಾಯಿ

ಆದಿ ಪ್ರಾಸರಹಿತ ಭೋಗ ಷಟ್ಪದಿ ಛಂದಸ್ಸಿನಲ್ಲಿ ರಚಿಸಿರುವ ಮಕ್ಕಳ ಪದ್ಯ
ಕೊಟ್ರೇಶ್ ಎಸ್.ಉಪ್ಪಾರ್, ಆಲೂರು
     
     -1-
ನನ್ನ ಹಳ್ಳಿಯಲ್ಲಿ ನಮ್ಮ
ಮುಗ್ದ ಜನರು ಲಲ್ಲೆಯಿಂದ
ರಾಮ, ಭೀಮ, ಸೋಮ, ಕಾಳ ಎಂದು ಕರೆವರು |
ಅಂದು ಮಾಡಿದಂಥ ಅಡುಗೆ
ಜೋಳ ರೊಟ್ಟಿ, ರಾಗಿ ಮುದ್ದೆ
ಚೀಪಿ ಬಿಟ್ಟ ಮೂಳೆಗಳನು ತಂದು ಕೊಡುವರು ||01||
ಹೊಟ್ಟೆ ತುಂಬ ತಿಂದು ತೇಗಿ
ರಾತ್ರಿಯೆಲ್ಲ ಪಾಳೆಕಾದು
ನಮ್ಮ ಬೀದಿ ಬಂಧುಗಳಿಗೆ ನಿಷ್ಠೆ ಮೆರೆವೆವು |
ಬೀದಿ ಮಾತ್ರ ನಮ್ಮ ಎಲ್ಲೆ
ಅದರ ಆಚೆ ಬೇರೆಯವರು
ನಮ್ಮ ಹಾಗೆ ಹಗಲು ರಾತ್ರಿ ಕಾಯುತಿರುವರು ||02||

ಬೆಳಗು ಆದ್ರೆ ಎದ್ದು ನಾವು
ಒಡೆಯನಿಂದೆ ಹೊಲಕೆ ಹೋಗಿ
ಹೊಲದ ಮೇರೆಗುಂಟ ಸಾಗಿ ಸುತ್ತಿ ಬರುವೆವು |
ಜೋಳ, ರಾಗಿ, ತೊಗರೆ, ನವಣೆ
ಬೆಳೆದ ಬೆಳೆಯ ಜೊತೆಗೆ ನಾವು
ಕುರಿಯ ಹಿಂಡು, ಎತ್ತು, ಎಮ್ಮೆ ಕಾಯುತಿರುವೆವು ||03||
ನನ್ನ ಹಳ್ಳಿ ನನಗೆ ಚೆಂದ
ಇಲ್ಲಿ ಉಂಟು ಹಚ್ಚ ಹಸಿರು
ಶುದ್ಧ ಗಾಳಿ, ಶುಭ್ರ ಬೆಳಕು ಸದಾ ಇರುವುದು |
ಹಳ್ಳ ಕೊಳ್ಳ ಗುಂಡಿ ಕೆರೆಯು
ನಿತ್ಯ ನಮ್ಮ ಈಜು ಕೊಳವು
ಮೂಗುದಾರ ಇಲ್ಲದಂಥ ಬದುಕು ದೊರೆವುದು ||04||
ಗೆಳೆಯರೆಲ್ಲ ಕೂಡಿಕೊಂಡು
ಊರ ಸುತ್ತ ಮುತ್ತ ಸಾಗಿ
ಬೇಲಿಯಾಚೆ ಪೊದೆಯ ಹೊಕ್ಕು ಮಿಕ್ಕಿ ನಡೆವೆವು |
ಬಸ್ಸು, ಲಾರಿ, ಕಾರು, ಜೀಪು
ಇಲ್ಲಿ ಯಾರ ಭಯವು ಇಲ್ಲ
ನಮಗೆ ನಾವು ರಾಜ ರಾಣಿ ಎಂದು ಮೆರೆವೆವು ||05||

        -02-
ನನ್ನ ನಗರದಲ್ಲಿ ನಮ್ಮ
ಪೇಟೆ ಮಂದಿ ಮುದ್ದಿನಿಂದ
ಟಾಮಿ, ಪಮ್ಮಿ, ಪಿಂಕಿ, ಜೂಲಿ ಎಂದು ಕರೆವರು |
ಬನ್ನು ಜಾಮು ಮಿಕ್ಸು ತಿಂಡಿ
ಡಾಗಿ ಫುಡ್ಡು ಹಗಲ ಊಟ
ಇಡ್ಲಿ, ದೋಸೆ, ಚಟ್ನಿ ಹೀಗೆ ನಿತ್ಯ ಕೊಡುವರು ||06||
ನವ್ಯ ಯುಗದ ಊಟ ಸವಿದು
ಗೇಟಿನೊಳಗೆ ಗಸ್ತು ಹೊಡೆದು
ಕೆನಲ್‍ನಲ್ಲಿ ನಿದ್ದೆ ಮಾಡಿ ಗೊರಕೆ ಹೊಡೆವೆವು |
ಮನೆಯು ಮಾತ್ರ ನಮ್ಮ ಎಲ್ಲೆ
ಎಲ್ಲರಿಗೂ ಒಂದೆ ನೀತಿ
ಪೇಟೆಯಲ್ಲಿ ಬಹಳ ಶಿಸ್ತು ನಮ್ಮ ಕರ್ಮವು ||07||
ನಸುಕಿನಲ್ಲಿ ನನ್ನ ಒಡೆಯ
ಕತ್ತಿಗೊಂದು ಬೇಡಿ ಹಾಕಿ
ಬೇಡಿ ಹಿಡಿದು ಬೆಳಗಿನಲ್ಲಿ ನಿತ್ಯ ನಡೆವರು |
ರಸ್ತೆ ಬದಿಯ ದಾರಿಯಲ್ಲಿ
ನಗರ ವನದಿ ಸುತ್ತಿ ಸುಳಿದು
ನನ್ನ ಹಾಗೆ ಗೆಳೆಯರೆಲ್ಲ ಗಾಳಿ ಕುಡಿವರು ||08||
ಸೋಪಿನಿಂದ ನಿತ್ಯ ಜಳಕ
ಉಡುಗೆ ತೊಡುಗೆ ನಿತ್ಯ ಪುಳಕ
ಒಡೆಯನಂತೆ ನಿತ್ಯ ನಾವು ಕಲಿಯುತಿರುವೆವು |
ಮಕ್ಕಳೊಡನೆ ನಿತ್ಯ ನಾವು
ಗೇಟಿನೊಳಗೆ ಆಟವಾಡಿ
ಹುಲ್ಲು ಹಾಸಿನಲ್ಲಿ ಉರುಳಿ ನಲಿಯುತಿರುವೆವು ||09||
ಒಂಟಿಯಾಗಿ ಗೇಟಿನಾಚೆ
ರಸ್ತೆ ಬದಿಗೆ ಬಂದ್ರೆ ಸಾಕು
ಬಸ್ಸು, ಲಾರಿ ಕಾರು, ಜೀಪು ಹರಿದು ಬಿಡುವವು |
ಪೇಟೆ ಬದುಕು ಬಹಳ ಕಷ್ಟ
ಜೀವ ಕರದಿ ಹಿಡಿದುಕೊಂಡು
ಗೇಟಿನೊಳಗೆ ಜಗವನೆಲ್ಲ ಕಾಣುತಿರುವೆವು ||10||

0 comments:

Post a Comment

 
Blogger Templates