Subscribe:

Ads 468x60px

ಇಲ್ಲಿ ಯಾರು ಮುಖ್ಯರಲ್ಲ, ಇಲ್ಲಿ ಯಾರು ಅಮುಖ್ಯರಲ್ಲ.

212 ನೆಯ ಮನೆ ಮನೆ ಕವಿಗೋಷ್ಠಿ


ಹಾಸನ, ನ. 2: ಪರಿಪೂರ್ಣತೆಯೆಡೆಗೆ ಸಾಗುವುದು ಹಾಗೂ ಮತ್ತೊಬ್ಬರನ್ನು ಜತೆಯಲ್ಲೇ ಸಾಗಿಸಿಕೊಂಡು ಹೋಗುವುದು ನಿಜವಾದ ಸಾಹಿತ್ಯ; ಅಂತಹ ಸಾಹಿತ್ಯವನ್ನು ಕೊಟ್ಟವರು ಕುವೆಂಪು ಮಾತ್ರ ಎಂದು ವಿಚಾರವಾದಿ ಸಾಹಿತಿ ಜ.ಹೊ. ನಾರಾಯಣಸ್ವಾಮಿ ಪ್ರತಿಪಾದಿಸಿದರು.
ನಗರದ ಹೇಮಾವತಿ ನಗರ ಮುಖ್ಯ ರಸ್ತೆಯಲ್ಲಿನ `ರಚನಾ’ ನಿವಾಸದಲ್ಲಿ ಕೆ.ಟಿ. ಜಯಶ್ರೀ- ಕೆ.ಸಿ. ಕೃಷ್ಣ ದಂಪತಿಯ ಪ್ರಾಯೋಜಕತ್ವದಲ್ಲಿ ಭಾನುವಾರ ನಡೆದ ಮನೆ ಮನೆ ಕವಿಗೋಷ್ಠಿಯಲ್ಲಿ ಅವರು `ಕನ್ನಡ ನಾಡು ನುಡಿಗೆ ಕುವೆಂಪು ಕೊಡುಗೆ’ ಎಂಬ ವಿಷಯ ಮಂಡಿಸಿ,
ಕುವೆಂಪು ಆರಂಭದಿಂದಲೇ ತಮ್ಮ ಸಾಹಿತ್ಯ ರಚನೆಗೆ ಆಧ್ಯಾತ್ಮಿಕ ನೆಲೆಗಟ್ಟು ಕಟ್ಟಿಕೊಂಡರು ಎಂದು ಹಲವು ದೃಷ್ಟಾಂತಗಳ ಸಹಿತ ವಿವರಿಸಿದರು.
ರಾಮಾಯಣದಲ್ಲಿ ಶಂಭೂಕನ ಶಿರಚ್ಛೇದ ಪ್ರಸಂಗವನ್ನು ಇಡೀ ಸಾರಸ್ವತ ಲೋಕ ನಿರ್ಲಕ್ಷಿಸಿತಾದರೂ, ಕುವೆಂಪು ಮಾತ್ರ ತಮ್ಮ ರಾಮಾಯಣ ದರ್ಶನಂ ಕಾವ್ಯದಲ್ಲಿ ಈ ಪ್ರಸಂಗವನ್ನು ಅತ್ಯಂತ ವಿಶಿಷ್ಟವಾಗಿ ಬಿಂಬಿಸಿ ವರ್ಣಾಶ್ರಮ ಧರ್ಮದ ವಿರುದ್ಧ ದನಿಯೆತ್ತಿದರು. ಉಪನಿಷತ್ತುಗಳ ಪೈಕಿ ಈಶಾವಾಸ್ಯ ಉಪನಿಷತ್ತನ್ನು ಮಾತ್ರ ಯಥಾವತ್ತಾಗಿ ಸ್ವೀಕರಿಸಬಹುದು; ಉಳಿದವನ್ನು ವಿಮರ್ಶಿಸಿ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ ಕುವೆಂಪು ತಮ್ಮ ಸಾಹಿತ್ಯದ ಮೂಲಕ ಪ್ರಕೃತಿ ಸೂತ್ರಗಳನ್ನು ಹೆಣೆದುಕೊಟ್ಟು ವಿಶ್ವ ಮಾನವತ್ವ ಪ್ರತಿಪಾದಿಸಿದರು.
ಆರಂಭದಲ್ಲಿ ಆಂಗ್ಲ ಭಾಷೆಯಲ್ಲಿ ಕವನಗಳನ್ನು ಬರೆಯುತ್ತಿದ್ದ ವಿದ್ಯಾರ್ಥಿ ಪುಟ್ಟಪ್ಪ ಅವರು, ಜೇಮ್ಸ್ ಕಸಿನ್ಸ್ ಎಂಬ ಆಂಗ್ಲ ಪಂಡಿತನ ಬುದ್ಧಿವಾದಕ್ಕೊಳಗಾದ ಬಳಿಕ ತಮ್ಮ ಅಂತರಂಗವನ್ನು ಮಾತೃ ಭಾಷೆಗೆ ತೆರೆದುಕೊಂಡರು; ತರುವಾಯ ಕನ್ನಡ ಸಾರಸ್ವತ ಲೋಕಕ್ಕೆ ಕುವೆಂಪು ಆಗಿ ಬಂದು ತಾವೇ ಒಂದು ದೊಡ್ಡ ಕೊಡುಗೆಯಾದರು ಎಂದು ಜಹೊನಾ ಬಣ್ಣಿಸಿದರು.

ಬಿಡುಗಡೆ-ಅಭಿನಂದನೆ:
ಈ ಸಂದರ್ಭದಲ್ಲಿ ಮನೋವೈದ್ಯ ಡಾ. ಎ.ಎಂ. ನಾಗೇಶ್ ವಿರಚಿತ `ಚಿತ್ತ, ಯೋಗ ಮತ್ತು ಪ್ರಕೃತಿ ಗೀತೆಗಳ ಸಂಗಮ `ಮನೋಕಾಶಿ’ ಧ್ವನಿ ತಟ್ಟೆಯನ್ನು ಜಹೊನಾ ಬಿಡುಗಡೆ ಮಾಡಿದರು. ಈ ಗೀತೆಗಳನ್ನು ಗಾಯಕ ರೋಹನ್ ಅಯ್ಯರ್ ಹಾಡಿದ್ದು, ಈ ರಚನೆಗಳ ಕುರಿತು ಚಿನ್ನೇನಹಳ್ಳಿ ಸ್ವಾಮಿ ಮಾತನಾಡಿದರು. `ನಾ ಮೆಚ್ಚಿದ ಕವಿತೆ’ ಅವಕಾಶದಲ್ಲಿ ಹರಿವಂಶರಾಯ್ ಬಚ್ಚನ್ ವಿರಚಿತ ಕವನವೊಂದರ ಕುರಿತು ವೇದಾವತಿ ಮೆಚ್ಚುಗೆಯ ಮಾತನಾಡಿದರು. ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಡಾ. ಗುರುರಾಜ ಹೆಬ್ಬಾರ್ ಹಾಗೂ ಜಿಲ್ಲಾ ರಾಜ್ಯೋತ್ಸವ ಸನ್ಮಾನಿತರಾದ ಎ.ಸಿ. ರಾಜು, ದುದ್ದ ಯೋಗೇಂದ್ರ ಹಾಗೂ ಗೊರೂರು ಸೋಮಶೇಖರ್ ಅವರುಗಳಿಗೆ ಅಭಿನಂದಿಸಲಾಯಿತು.
ನಂತರ ನಡೆದ ಕವಿಗೋಷ್ಠಿಯಲ್ಲಿ ವಿನಯ್ ಎಸ್.ಆರ್., ಸಮುದ್ರವಳ್ಳಿ ವಾಸು, ವೆಂಕಟೇಶ್, ನವಾಬ್ ಬೇಲೂರು, ಲಲಿತ ಎಸ್., ಗೊರೂರು ಅನಂತರಾಜು, ಎನ್.ಎಲ್. ಚನ್ನೇಗೌಡ, ಚೂಡಾಮಣಿ ಎಚ್.ಬಿ., ಡಾ. ಕೆ.ಕೆ. ಜಯಚಂದ್ರಗುಪ್ತ, ಶೀಟಿ, ಬೆಳಗುಲಿ ಕೆಂಪಯ್ಯ, ಚಲಂ ಹಾಡ್ಲಹಳ್ಳಿ, ಎಸ್.ಎನ್. ಯೋಗೇಶ್, ಎಸ್.ಎಂ. ದೇವರಾಜೇಗೌಡ, ಗೊರೂರು ಶಿವೇಶ್, ಶ್ರೀವಿಯ ಹಾಸನ್, ಶಾಂತಾ ಅತ್ನಿ, ರತ್ನ ಕೃಷ್ಣೇಗೌಡ, ಸೀತಮ್ಮ ವಿವೇಕ್ ಮುಂತಾದವರು ಸ್ವರಚಿತ ಕಾವ್ಯ ವಾಚನ ಮಾಡಿದರು. ಈ ಸಂದರ್ಭದಲ್ಲಿ ಜಯದೇವಪ್ಪ, ಸುಶೀಲ ಸೋಮಶೇಖರ್, ಶೈಲಜಾ ಹಾಸನ್, ಡಾ. ಸಾವಿತ್ರಿ, ಪತ್ರಕರ್ತರುಗಳಾದ ಉದಯ್ ಯು., ಎಚ್.ಎಸ್. ಪ್ರಭಾಕರ, ಗಿರೀಶ್ ಮತ್ತಿತರರು ಹಾಜರಿದ್ದರು.
ಸಂಚಾಲಕ ಕೊಟ್ರೇಶ್ ಉಪ್ಪಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾಯೋಜಕರಾದ ಕೆ.ಸಿ. ಕೃಷ್ಣ ಸ್ವಾಗತಿಸಿದರು. ಕೆ.ಟಿ. ಜಯಶ್ರೀ ಪ್ರಾರ್ಥನೆ ಮಾಡಿದರು.

0 comments:

Post a Comment

 
Blogger Templates